ತುಳು ಯಕ್ಷಗಾನಕ್ಕೆ ಪ್ರೋತ್ಸಾಹ ಶ್ಲಾಘನೀಯ : ಲಕ್ಷ್ಮೀನಾರಾಯಣ ಆಸ್ರಣ್ಣ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜುಲೈ 14 , 2015
|
ಜುಲೈ 14, 2015
|
ತುಳು ಯಕ್ಷಗಾನಕ್ಕೆ ಪ್ರೋತ್ಸಾಹ ಶ್ಲಾಘನೀಯ : ಲಕ್ಷ್ಮೀನಾರಾಯಣ ಆಸ್ರಣ್ಣ
ಮಂಗಳೂರು :
ಜಿಲ್ಲೆಯಲ್ಲಿ ತುಳು ಯಕ್ಷಗಾನ ಸಪ್ತಾಹ ಮೂಲಕ ತುಳು ಭಾಷೆಯ ಯಕ್ಷಗಾನಕ್ಕೆ ಪ್ರಾಮುಖ್ಯ ನೀಡಿರುವುದು ಶ್ಲಾಘನೀಯ. ಯಕ್ಷಗಾನ ಮತ್ತು ತುಳುವಿನ ಮೇಲಿನ ಅಭಿಮಾನದಿಂದ ಸಂಘಟಿಸಿರುವ ಸಪ್ತಾಹ ಯಶಸ್ವಿಯಾಗಲಿ ಎಂದು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹಾರೈಸಿದರು.
ನಗರದ ಮಂಗಳಾದೇವಿ ದೇವಸ್ಥಾನ ಮಂಗಳಾ ಮಂಟಪದ ಯಕ್ಷಗುರು ಪಡ್ರೆ ಚಂದು ವೇದಿಕೆಯಲ್ಲಿ ಭಾನುವಾರ ಯಕ್ಷ ತುಳು ಪರ್ಬ ಸಪ್ತಾಹ ಸಮಿತಿ ವತಿಯಿಂದ ಆಯೋಜಿಸಿರುವ 'ತುಳು ಯಕ್ಷಗಾನ ಸಪ್ತಾಹ' ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಜನರ ಯಾಂತ್ರಿಕ ಜೀವನಕ್ಕೆ ಅನುಕೂಲವಾಗುವಂತೆ ಯಕ್ಷಗಾನದ ಕಾಲಮಿತಿ ಪ್ರದರ್ಶನ ಅನಿವಾರ್ಯ. ಯಕ್ಷಗಾನ ಸಪ್ತಾಹಗಳಿಂದ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆಯುವ ಜತೆಗೆ ಕಲಾವಿದರ ಜೀವನಕ್ಕೂ ನೆರವು ದೊರೆಯುತ್ತದೆ ಎಂದರು.
ಕಟೀಲು ಮತ್ತು ಧರ್ಮಸ್ಥಳ ತೆಂಕುತಿಟ್ಟು ಯಕ್ಷಗಾನದ ಎರಡು ಕಣ್ಣುಗಳಿದ್ದಂತೆ. ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ 200 ವರ್ಷಗಳ ಇತಿಹಾಸ ಇದೆ. ಧರ್ಮಸ್ಥಳದಲ್ಲೂ ಇನ್ನೂ ಎರಡು ಮೇಳ ಆರಂಭಕ್ಕೆ ಬೇಡಿಕೆ ಇದೆ. ಸದ್ಯಕ್ಕೆ ಹೊಸ ಮೇಳದ ಆಲೋಚನೆ ಇಲ್ಲ. ಧರ್ಮಸ್ಥಳ ಯಕ್ಷಗಾನ ಅಧ್ಯಯನ ಕೇಂದ್ರದ ಗುರು ವಾಗಿದ್ದ ಪಡ್ರೆ ಚಂದು ಅವರು ನಿಗರ್ವಿ. ತನ್ನೊಳಗೆ ಅಪಾರ ವಿದ್ಯೆ ಹೊಂದಿದ್ದರೂ, ಅದರ ಬಗ್ಗೆ ಗರ್ವ ತಾಳದೆ ಶಿಷ್ಯರಿಗೆ ಕಲಿಸಿಕೊಡುತ್ತಿದ್ದರು. ಪಡ್ರೆ ಚಂದು ಅವರಿಂದ ತರಬೇತಿ ಪಡೆದ ಶೇ.80ಕ್ಕೂ ಅಧಿಕ ಮಂದಿ ಪ್ರಸಿದ್ಧ ಕಲಾವಿದರಾ ಗಿದ್ದಾರೆ ಎಂದು ಅವರು ಹೇಳಿದರು.
ಸಪ್ತಾಹ ಸಮಿತಿ ಅಧ್ಯಕ್ಷ ಡಿ.ಮನೋಹರ ಕುಮಾರ್ ಪಡ್ರೆ ಚಂದು ಸಂಸ್ಮರಣೆ ಮಾಡಿ, ಪಡ್ರೆ ಚಂದು ಅವರು ಶ್ರೇಷ್ಠ ಯಕ್ಷಗುರು. ಅವರಿಂದ ತರಬೇತಿ ಪಡೆದ ಶಿಷ್ಯರು ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಿದ್ಧ ಕಲಾವಿದರಾಗಿ ರೂಪುಗೊಂಡಿದ್ದಾರೆ. ಅವರ ಶಿಷ್ಯರಿಂದಲೇ ಸಮರ್ಥ ಕಲಾವಿದರನ್ನು ಒಳಗೊಂಡ ಎರಡು ಮೇಳ ಕಟ್ಟಬಹುದು ಎಂದರು.
ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಉಪ ಸ್ಥಿತರಿದ್ದರು. ಉದ್ಯಮಿ ರಾಜಗೋಪಾಲ ರೈ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಇಲಿಯಾಸ್ ಸ್ಯಾಂಟಿಸ್ ಅಧ್ಯಕ್ಷತೆ ವಹಿಸಿ, ಅಭಿನಂದನಾ ಭಾಷಣ ಮಾಡಿದರು. ಯಕ್ಷಗಾನ ಸಪ್ತಾಹ ಸಮಿತಿ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
vijaykarnataka
|
|
|